ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Monday, October 21, 2013

ಭೂಮಿಯ ಬಳಿಗೊಂದು.....


ಅವಳ ಹೆಸರು ಭೂಮಿಯಂತೆ. (ಭೂಮಿಕಾ).
ಮುತ್ತಿನಂತೆ ನಗುವ ಹಸನ್ಮುಖಿಯಂತೆ ಆಕೆ.... ಬೆಳ್ಳಂಬೆಳ್ಳಗಿನ ಹಂಸವಂತೆ ಆಕೆ...
ನಕ್ಕು ಸುಮ್ಮನಾಗೋ ವಿಷಯಕ್ಕೆ ಕೆಂಡಾಮಂಡಲವಾಗಿ.... ಸಿಟ್ಟಾಗೋ ವಿಷಯಕ್ಕೆ ಸುಮ್ಮನೆ ನಕ್ಕು ಸುಮ್ಮನಾಗುವಳಂತೆ...
ಅಯ್ಯೋ ಶುದ್ಧ ಉಲ್ಟಾ ಪಲ್ಟಾ ಹುಡುಗಿ ಅಂತಿದ್ದ.
ಯಾವುದೋ  ಸಹಜವಾದ ಮಾತಿಗೆ ಅಪಾರ್ಥ  (ಹೇಳುವಾಗೇನೋ ಅಪರಾ ತಪರಾ ಆಗಿರದಬೇಕು) ಮಾಡಿಕೊಂಡು ಏನೇನೋ ಬಯ್ದು ಹೋದಳಂತೆ..
ಪ್ರೀತಿಯ ಸ್ನೇಹಿತೆ ಆಕೆ... ಮತ್ತೆ ಬರುವಳೋ ಏನೋ ಗೊತ್ತಿಲ್ಲ.. ನಾನು ಪತ್ರ ಬರೆದವನಲ್ಲ.. ಮೊದಲನೆಯದಾಗಿ ಕೊನೆಯದಾಗಿ ಚಂದಗೆ ನನಗೊಂದು ವಿದಾಯದ ಪತ್ರ ಬರೆದು ಕೊಡು ಎಂದವನಿಗೆ ತಿರಸ್ಕರಿಸಿ ತಿರಸ್ಕರಿಸಿ ಕೊನೆಗೆ ಬರೆದದ್ದು...

ವಿದಾಯದ ಪತ್ರವನ್ನು ಚಂದವಾಗಿ ಬರೆಯೋದು ಹೇಗೇ ರೀ......................

                                                    *********************
ಭೂಮಿಯ ಬಳಿಗೊಂದು,


ಹೇಯ್....
ನಾಳೆ address ಕೇಳಿಟ್ಟಿರ್ತೇನೆ.. ಸಿಗದೇ ಹೋಗಬೇಡ... online ಗಾದ್ರೂ ಬಾ  address ಕೊಡ್ತೀನಿ..ಇಲ್ಲಾ.. ಏನಾದ್ರೂ problem ಅನ್ಸಿದ್ರೆ call ಮಾಡು ಅಂತ ನಾ ಹೇಳಿದ್ರೆ ಅಷ್ಟಕ್ಕೇ ಏನೇನಾದ್ರು ಅಂದ್ಕೊಂಡು ನಂಗೆ ಏನೇನೋ ಅಂದ್ಬಿಟ್ಯಲ್ಲಾ...
ನೀನಂದಿದ್ದು ಸರೀನಾ...... ನೀನೇ ವಿಚಾರ ಮಾಡು......
call ಮಾಡು ಅಂದೆ ನಿಜ.... ನನ್ ನಂಬರ್ ನಿಂಗ್ ಕೊಟ್ಟಿದೀನಾ? ಇಲ್ಲಾ ನಿನ್ ನಂಬರ್ ನ್ನ ನಾನು ಕೇಳಿದೀನಾ? ಯಾವುದೋ ಕೆಂಪು ದೀಪದ ಕೆಳಗೆ ನಿಂತಿರೋ ಹುಡುಗೀನ ಕರೆದಿರೋ ಥರಾ..., ಏನೋ ದೊಡ್ಡದಾಗಿ ಪೀಡಿಸ್ತಿರೋನ ಥರಾ..., ಎಲ್ಲೋ ನಿನ್ನನ್ನ park ಗೆ ಕರೆದಿರೋನಿಗೆ ಹೇಳೋ ರೀತಿ ನನಗೂ ಅಂದ್ಬಿಟ್ಯಲ್ಲಾ...... ನವಿಲು ಬಣ್ಣಗಳ ಹುಡುಗಿ ಇಷ್ಟೇನಾ ನನ್ನ ಅರ್ಥ  ಮಾಡಿಕೊಂಡಿರೋದು..... ನಂಗೂ ಒಂದು ಮನಸಿದೆ ಅದಕ್ಕೂ ನೋವಾಗುತ್ತೆ ಅಂತ ಅನಿಸಲೇ ಇಲ್ವಾ?...
ನನ್ನಿಡೀ life ನಲ್ಲಿ ಖಂಡಿತಾ ನಾನು ನಿನ್ನನ್ನ ಒಂದೇ ಒಂದು ಬಾರಿ ಕೂಡಾ ಭೆಟಿ ಆಗೊಲ್ಲಾ..... ಅದು ನಿನಗೂ ಗೊತ್ತಿದೆ..... ಆದರೂ ಎಲ್ಲರನ್ನೂ ಒಂದೆ ದ್ರಷ್ಟಿಯಲ್ಲಿ ನೋಡೋ ಮನಸು ನಿಂಗ್ಯಾಕೆ ಭೂಮೀ......

ಮತ್ತೊಬ್ಬ ಮನುಷ್ಯನ ಮೇಲೆ ಅಪನಂಬಿಕೆಯಿಂದ ಗೆದ್ದ ಗೆಲುವಿಗಿಂತ.... ನಂಬಿಕೆಯಿಂದ ಬಂದ ಸೊಲೇ ಹೆಚ್ಚು ಸಂತ್ರಪ್ತಿ ನೀಡುತ್ತದೆ ಎಂದು ಅಂದುಕೊಂಡವ ನಾನು...ನನ್ನ ಮೇಲೆ ನಿನಗೆ ಇಷ್ಟೊಂದು ಅಪನಂಬಿಕೆಯಿರುವಾಗ ನಾನು ಒಳ್ಳೆಯವನೆಂದು ಹೇಳಿಕೊಂಡರೆ ಅದು ನನ್ನ ಹುಚ್ಚುತನವಾಗುತ್ತೆ ನಂಗೊತ್ತು.... ಆ ಪ್ರಯತ್ನ ನಾನು ಮಾಡಲ್ಲಾ........

ನನಗೆ ಇದುವರೆಗೂ ಯಾರೂ ಹೀಗಂದಿಲ್ಲಾ.... ನನ್ನ ಬಗ್ಗೆ ಬೆರೆಯವರು ಈ ರೀತಿ ಯೋಚ್ನೆ ಮಾಡ್ಬಹುದೆನ್ನೊ ಕಲ್ಪನೆಯೇ ನನಗೆ ಹೊಸದು.... ನಿನು ಹಿಗಂದೆ ಅಂತಾ ಬೇರೆ ಯಾರಿಗೂ ಗೊತ್ತಿಲ್ಲಾ ನಿಜ.. ಆದರೆ ಇದು ನನ್ನೊಳಗೇ ನನಗೊಂದು ಅಪಮಾನ ಅನಿಸ್ತಿದೆ... ಅಪಮಾನ ಸಹಿಸಿಕೊಳ್ಳೋದು ಕಷ್ಟವಲ್ಲಾ ಭೂಮೀ...... ಆದರೆ ಅದನ್ನ ಸಹಿಸಿಕೊಳ್ಳೋದು ಅನ್ಯಾಯ......
ಬಿಡು ಅದು ನನ್ನ ಪಾಡು...

 ಬದುಕು ಏನೇನೆಲ್ಲವನ್ನೂ ನೀಡುತ್ತದೆ... ಕೆಲವೊಮ್ಮೆ ಅನಿಸಿದ್ದು ಕೈಗೂಡುತ್ತದೆ ಅನ್ನುವಾಗ ಕೊಟ್ಟಿದ್ದೆಲ್ಲವನ್ನೂ ಕಿತ್ತುಕೊಂಡು ಬಿಡುತ್ತದೆ.... ನನ್ನ ಪಾಲು ಇಷ್ಟೇ ಇತ್ತು ಅನಿಸುತ್ತದೆ.ಎಲ್ಲರಿಗೂ ಎಲ್ಲವೂ ಸಿಗದು......
ಆಕಾಶ ಸಿಕ್ಕರೆ ಭೂಮಿ ಸಿಗದು.......

ಕಣ್ಣು ಹೋದಾಗಲೂ ವ್ಯಕ್ತಿ ಸಾಯಲಿಲ್ಲ... ಕಿವಿ ಹೋದಾಗಲೂ ಸಾಯಲಿಲ್ಲ.... ಆದರೆ ಮೂಲ ಪ್ರಾಣ ಹೊರಟು ನಿಂತಾಗ  ಕಣ್ಣು ಕಿವಿ ಮೂಗು ಎಲ್ಲವೂ ಸಾಯಲಿಕ್ಕೆ ಸಿದ್ದತೆ ಮಾಡಿಕೊಂಡವಂತೆ....

ಹೂಂ.... ನೀನೂ ಹೊರಟು ನಿಂತಿದ್ದೀಯಾ.....
ಸ್ನೇಹದಾ ಸಹವಾಸಕೆಸಕೆ ವಿದಾಯ ಹಾಡಿ...

ಕೆಟ್ಟವರ ಸಾಲಲ್ಲಿ ನನಗೊಂದು ಜಾಗ ನೀಡಿ......

ಹೋಗುವುದಾದರೆ ಹೋಗಿ ಬಿಡು...
ಬದುಕು ಮಧುರವಾಗಿರಲಿ...
                              --- ಫಕ್ರೂದ್ದೀನ್...

                                                 **************************


                               ಕಾಲ ಬದಲಾದಂತೆ ಮನಸ್ಥಿತಿಯೂ ಬದಲಾಗುತ್ತವೆ....  ನೋಡಿ ಆವತ್ತು ಏನೇನೋ ಜಗಳವಾಡಿಕೊಂಡು ಹೋದವರೇ ಈವತ್ತು ನನ್ನ ಅಕ್ಕ ಪಕ್ಕದಲ್ಲಿ ಕುಳಿತು ಹಾಸ್ಯ ಮಾಡುತ್ತಾ... ಬರೆಯಲೇಬೇಕೆಂದು  ಬರೆಸುತ್ತಿದ್ದಾರೆ ಇದನ್ನೆಲ್ಲವನ್ನೂ ಮತ್ತೊಮ್ಮೆ....  ಆಶ್ಚರ್ಯ ಅಂದ್ರೆ ಎರಡೂವರೆ ವರುಷದ ಹಿಂದೆ ಬರೆದ ಪತ್ರಕ್ಕೆ ಇನ್ನೂ ಕೂಡಾ ಒಂದು ಮಡಿಕೆಯೂ ಬಿದ್ದಿಲ್ಲ...
ಆಗಾಗ ನೋಡಿ feel  ಆಗಲು... ನೆನೆಸಿ ಅದ್ದಿ ನಗಲು  ಬೇಕಂತೆ ಅದು... ಈಗಲೂ ಜಗಳ ಕಾಯುತ್ತಾರೆ ಪ್ರೀತಿಯಿಂದ... 
ಏ ಫಕ್ರೂದ್ದೀನ್ !! ಉಲ್ಟಾ ಪಲ್ಟಾ ಅಂದ್ರೆ ಮತ್ತೆ ಹೊರಟುಬಿಡ್ತೀನಿ ಅಂತ ಅವಳು....
ಹೋಗು ನೋಡೋಣ ಇಂಥಾದ್ದೇ ಇನ್ನೊಂದು ಪತ್ರ ಬರೆಸ್ತೀನಿ ಅಂತ ಇವನು..
ಫನ್ನಿ ಫೆಲೋಸ್...
ನೋಡಿ ಖುಷಿಯಾಯ್ತು....

ಮೊದಲು ಅಚ್ಛ ಸ್ನೇಹದ ತುಂಬಾ ಪ್ರೀತಿಯಿತ್ತು.....
ಈಗ ತುಂಬು ಪ್ರೀತಿಯಲ್ಲಿ ಅಚ್ಛ ಸ್ನೇಹವಿದೆ...
ಅದೆಲ್ಲಕ್ಕಿಂತಲೂ ಹೆಚ್ಚಾಗಿ ತೀರಾ ತೀರಾ ಸಹಜತೆಯಿದೆ..
ಸಹಜತೆ ತುಂಬಾ ಖುಷಿ ಕೊಡುತ್ತೆ ಮನಸ್ಸಿಗೆ...

ಅಂದ ಹಾಗೆ ಹೇಳಲು ಮರೆತೆ..
ಇವರರಿಬ್ಬರೂ ನನಗೆ ಅರೆ ಖಾಸಗೀ ಸ್ನೇಹಿತರು. ಮತ್ತೆ.....
ಇದೇ ಬರುವ ಡಿಸೆಂಬರಿನ ಛಳಿಯಲ್ಲಿ ಇವರ ಮದುವೆ.....

***********************ರಾಘವ್.